Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಗ್ರಾಮದೆಡೆಗೆ ಬಿಜೆಪಿ ನಡಿಗೆ – ಬಂಟ್ವಾಳ ಬಿಜೆಪಿಯಿಂದ ವಿನೂತನ ಕಾರ್ಯಕ್ರಮಕ್ಕೆ ಚಾಲನೆ :

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿದಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಗೆ ಪೊಳಲಿಯ ರಾಜರಾಜೇಶ್ವರಿ ದೇವಾಲಯದ ಸನ್ನಿಧಿಯಲ್ಲಿ ಮಂಗಳವಾರ ಸಂಜೆ ಚಾಲನೆ ದೊರಕಿದೆ.

ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಅವರು ರಾಜೇಶ್ ನಾಯಕ್ ಅವರಿಗೆ ಪಕ್ಚದ ಧ್ವಜ ನೀಡುವ ಮೂಲಕ ಗ್ರಾಮದೆಡೆಗೆ ಬಿಜೆಪಿ ನಡಿಗೆಗೆ ಹಾಗೂ ಪೊಳಲಿಯ ಪ್ರಗತಿಪರ ಕೃಷಿಕ ವಾಸುದೇವಾ ಭಟ್ ಅವರು ಕೃಷಿ ಕಾರ್ಯಕ್ಕೆ ಬಳಸಿದ ನೇಗಿಲ ಪಣರವನ್ನು ದ.ಕ.ಜಿಲ್ಲಾ ಲೋಹ ಸಂಗ್ರಹ ಅಭಿಯಾನದ ಸಂಚಾಲಕ ಡಾ.ಭರತ್ ಶೆಟ್ಟಿ ಮತ್ತು ಸಂಸದ ನಳಿನ್ ಕುಮಾರ್ ಅವರಿಗೆ ಹಸ್ತಾಂತರಿಸಿ ಚಾಲನೆ ನೀಡಿದರು.

ಬಳಿಕ ನಡೆದ ಸಭೆಯನ್ನುದ್ದೇಶಿಸಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಮಕರ ಸಂಕ್ರಮಣದ ಬಳಿಕ ದೇಶದೆಲ್ಲೆಡೆ ಹೊಸ ಪರಿವರ್ತನೆಯ ಗಾಳಿ ಬೀಸುತ್ತಿದ್ದು ಅಭಿವೃದ್ದಿಯ ಕ್ರಾಂತಿ ಆಗಲಿದೆ ಎಂದರು.ಕೇಂದ್ರ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರಗಲ ಆಡಳಿತ ವೈಫಲ್ಯದ ವಿರುದ್ದ ವಾಗ್ದಾಳಿ ನಡೆಸಿದ ಸಂಸದ ಕಟೀಲು ಅವರು ಸರ್ದಾರ್ ವಲ್ಲಭಾಬಾಯಿ ಪಟೇಲ್‌ರಂತಹ ಹಲವಾರು ಮಹಾನ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರನ್ನು ಮರೆಯುತ್ತಿರುವ ಕಾಂಗ್ರೆಸ್ ನಾಯಕರು ಕೇವಲ ಗಾಂಧೀ ಕುಟುಂಬದವರನ್ನು ಮಾತ್ರ ಓಲೈಸುವ ಪ್ರಯತ್ನ ನಡೆಸುತ್ತಿದೆ ಎಂದು ಆಪಾದಿಸಿದರು.

ಸಭಾದ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ ಮನೆಮನೆಗೆ ತೆರಳಿ ಸರ್ಕಾರದ ವೈಫಲ್ಯವನ್ನು ಮನದಟ್ಟು ಮಾಡುವುದರೊಂದಿಗೆ ಈ ದೇಶದ ಪುನರ್ ನಿರ್ಮಾಣದ ಕಳಕಳಿಯನ್ನು ಜನರಿಗೆ ತಿಳಿಸುವ ಪ್ರಯತ್ನ ಪಾದಯಾತ್ರೆಯ ಮೂಲಕ ನಡೆಯಲಿದೆ ಎಂದರು.

ಈ ಪಾದಯಾತ್ರೆಯ ರುವಾರಿ ರಾಜೇಶ್ ನಾಯಕ್ ಉಳೇಪಾಡಿಗುತ್ತು ಅವರು ಪ್ರಸ್ತಾವಿಕವಾಗಿ ಮಾತನಾಡಿ ಗುಜರಾತಿನ ಅಭಿವೃದ್ದಿಯ ಹರಿಕಾರ ನರೇಂದ್ರ ಮೋದಿಯವರು ಭವಿಷ್ಯದಲ್ಲಿ ದೇಶದ ಪ್ರಧಾನ ಮಂತ್ರಿಯಾಗ ಬೇಕು ಅದಕ್ಕಾಗಿ ಪಕ್ಷವನ್ನು ಗ್ರಾಮಮಟ್ಟದಲ್ಲಿ ಪುನರ್ ಸಂಘಟಿಸುವ ಉದ್ದೇಶದಿಂದ ಈ ಪಾದಾಯಾತ್ರೆ ತಾಲೂಕಿನ 59 ಗ್ರಾಮಗಳಲ್ಲಿ ಸಂಚರಿಸಲಿದೆ. ಕಾರ್ಯಕರ್ತರು ಮುಂದಿನ ಚುನಾವಣೆಯವರೆಗೂ ವಿಶ್ರಮಿಸ ಬಾರದು ಎಂದು ಕರೆ ನೀಡಿದರು.

ವಿ.ಪ.ಸದಸ್ಯರಾದ ಗಣೇಶ್ ಕಾರ್ಣಿಕ್, ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಯೋಗೀಶ್ ಭಟ್, ಪದ್ಮನಾಭ ಕೊಟ್ಟಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ, ಪ್ರ.ಕಾರ್ಯದರ್ಶಿಗಳಾದ ರಾಮದಾಸ, ದೇವಪ್ಪ ಪೂಜಾರಿ, ಹಿ.ವ.ಆಯೋಗದ ಸದಸ್ಯ ತುಂಗಪ್ಪ ಬಂಗೇರಾ, ಯುವಮೋರ್ಚದ ಕಾರ್ಯದರ್ಶಿ ವಿಕಾಸ್ ಪುತ್ತೂರು, ಎಪಿಎಂಸಿ ಅಧ್ಯಕ್ಷ ನೇಮಿರಾಜ ರೈ, ದಿನೇಶ್ ಭಂಡಾರಿ, ಜಗದೀಶ ಅಧಿಕಾರಿ, ಜಿ.ಪಂ.ಸದಸ್ಯೆ ನಳಿನಿ, ತಾ.ಪಂ.ಉಪಾಧ್ಯಕ್ಷ ಆನಂದ ಶಂಭೂರು ಮೊದಲಾದವರು ಹಾಜರಿದ್ದರು.

ಕಾರ್ಯಕ್ರಮಕ್ಕೆ ಮುನ್ನ ಶ್ರೀ ರಾಜರಾಜೆಶ್ವರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಇಲ್ಲಿಂದ ಆರಂಭಗೊಂಡ ಪಾದಯಾತ್ರೆ ಬಡಗಬೆಳ್ಳೂರು ಗ್ರಾಮದ ಕೊಳ್ಳತ್ತಮಜಲು ಕಂಬಳ ಗದ್ದೆಯಲ್ಲಿ ಕಾರ್ಯಕರ್ತರ ಸಭೆಯೊಂದಿಗೆ ಸಮಾಪನಗೊಂಡಿತು. ಕಾರ್ಯಕ್ರಮ ಸಂಚಾಲಕ ದೇವದಾಸ ಶೆಟ್ಟಿ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.

Highslide for Wordpress Plugin